karunada geleya

dsfdsf

ಫೆಬ್ರ 16, 2022

ಕನ್ನಡದ ನುಡಿಮುತ್ತುಗಳು ಹಾಗು ನೀತಿ ಮಾತುಗಳು

೧. ಮಾತಿನ ಬೆಲೆ ತಿಳಿದವರು

ಮೊದಲು ಹೃದಯದ ತಕ್ಕಡಿಯಲ್ಲಿ ತೂಗಿ

ನಂತರ ಮಾತನಾಡುತ್ತಾರೆ.

ಆದರೆ ಮಾತಿನ ಬೆಲೆ ತಿಳಿಯದವರು

ಮೊದಲು ಮಾತನಾಡಿ ನಂತರ

ಹೃದಯದ ತಕ್ಕಡಿಯಲ್ಲಿ ತೂಗಿ

ತಾವೂ ನೊಂದು ಬೇರೆಯವರನ್ನು ನೋಯಿಸುತ್ತಾರೆ.


೨. ಇರುವುದೆಲ್ಲವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ,

ಕಳಕೊಂಡ ಎಲ್ಲವನ್ನೂ ಪಡೆಯಲೂ ಸಾಧ್ಯವಿಲ್ಲ,

ಪಡೆದುಕೊಂಡ ಎಲ್ಲವನ್ನೂ ಕೊಡಲೂ ಸಾಧ್ಯವಿಲ್ಲ,

ಅಂದುಕೊಂಡದ್ದೆಲ್ಲವನ್ನು ಮಾಡಲೂ ಸಾಧ್ಯವಿಲ್ಲ,

ಸಾಧಿಸಿದ್ದೆಲ್ಲವನ್ನು ತೋರಿಸಲೂ ಸಾಧ್ಯವಿಲ್ಲ,

ಈ ಎಲ್ಲಾ ಸಾಧ್ಯವಿಲ್ಲಗಳ ನಡುವೆ ಸಾಧ್ಯವಿರುವುದು ಕೆಲವು,

ಅದೇ "ಪ್ರೀತಿ, ವಿಶ್ವಾಸ, ಸ್ನೇಹ, ನಂಬಿಕೆ ಮತ್ತು ಸಂಬಂಧ"

ಇದನ್ನು ಉಳಿಸಿಕೊಂಡು ಹೋಗುವುದೇ ಜೀವನ. 


೩. ಸಮಯ, ಅಧಿಕಾರ, ಹಣ ಮತ್ತು ಶರೀರ ನಮಗೆ ಜೀವನದ ಎಲ್ಲಾ ಸಮಯಗಳಲ್ಲೂ ಸಹಕರಿಸುವುದಿಲ್ಲ. ಆದರೆ ಒಳ್ಳೆಯ ನಡತೆ, ಒಳ್ಳೆಯ ತಿಳುವಳಿಕೆ, ಒಳ್ಳೆಯ ಮನಸ್ಸುಗಳು ನಮಗೆ ಯಾವಾಗಲೂ ಸಹಕರಿಸುತ್ತವೆ. 

೪. ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಇವು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.

೫.  ಶಸ್ತ್ರ ಮತ್ತು ಶಾಸ್ತ್ರ ಇವೆರಡಕ್ಕೆ ಇರುವ ವ್ಯತ್ಯಾಸ.... 

ಶಸ್ತ್ರ ಬದುಕನ್ನು ಕೊನೆಗೊಳಿಸುತ್ತದೆ ಶಾಸ್ತ್ರ ಬದುಕನ್ನು ನಿರೂಪಿಸುತ್ತದೆ. 

೬ ಗೆಲ್ಲಲೇಬೇಕೆಂಬ ಹಠವಿರಬಾರದು.

ಪ್ರಯತ್ನಿಸಿ ಸೋತರೂ ಸರಿಯೇ.

ನಾವು ನಡೆವ ಮಾರ್ಗವನ್ನು

ನಮ್ಮ ಅಂತರಾತ್ಮ ಒಪ್ಪಿದರೆ ಸಾಕು.

ಹಿಯಾಳಿಸುವ ಮಾತಿಗೆ ಕಿವಿಕೊಡಬಾರದು ಅಷ್ಟೇ.


೭. ತಿಳಿಯಬೇಕಾದ್ದದು  ಸಮುದ್ರದಷ್ಟು,

ತಿಳಿದಿರುವುದು ಹನಿಯಷ್ಟು.

ಮಾತುಗಳನ್ನು ಎಣಿಸಿ ನೋಡಬಾರದು,

ತೂಕ ಮಾಡಿ ನೋಡಬೇಕು.

ಹಸಿವು ಚೆನ್ನಾಗಿದ್ದರೆ ಊಟ ಚೆನ್ನಾಗಿಯೇ ಇರುತ್ತದೆ.

 

೮. ನದಿಯಿಂದ ಪ್ರತಿಯೊಬ್ಬರೂ ನೀರನ್ನು ತೆಗೆದುಕೊಂಡು ಹೋದರೂ...

ಅದೇನು ಬತ್ತಿ ಹೋಗುವುದಿಲ್ಲ. ಮೊದಲಿಗಿಂತ ರಭಸವಾಗಿ ಹರಿಯುತ್ತದೆ.

ಬೇರೆಯವರಿಗೆ ಸಹಾಯ ಮಾಡುವುದರಿಂದ ನಾವೇನೂ ಖಾಲಿ ಆಗುವುದಿಲ್ಲ.

ಮೊದಲಿಗಿಂತ ಹೆಚ್ಚು ಬಲಿಷ್ಠವಾಗುತ್ತೇವೆ. 


೯. ಜೇಬು ಖಾಲಿಯಾದಾಗ, ಎದುರಾಗುವ ಒಂದೊಂದು ತಿರುವು ಕೂಡಾ

ಒಂದೊಂದು ಪಾಠವನ್ನು ಹೇಳಿಕೊಡುತ್ತದೆ.

ಆದರೆ ಜೇಬು ತುಂಬಿದಾಗ ಎದುರಾಗುವ 

ಪ್ರತಿಯೊಂದು ತಿರುವು ಕೂಡಾ ನಮ್ಮನ್ನು

ದಾರಿ ತಪ್ಪುವಂತೆ ಮಾಡುತ್ತದೆ. 

೧೦. ಕೆಲವೇ ತಪ್ಪುಗಳಿಗಾಗಿ ಒಂದು ಉತ್ತಮ ಸಂಬಂಧ ಮುರಿದುಕೊಳ್ಳಬೇಡಿ.

ಏಕೆಂದರೆ ಪರಿಪೂರ್ಣತ್ವ ಕೇವಲ ತತ್ವ ಮಾತ್ರ.

ಇದರ ಜೊತೆಗೆ ನಾನು ಸರಿಯಾಗಿದ್ದೇನೆ ಎಂಬುದೂ ಭ್ರಮೆ.

ಹೀಗಾಗಿ ತಪ್ಪುಗಳನ್ನು ಮನ್ನಿಸಿ ಸಂಬಂಧ ಉಳಿಸಿಕೊಳ್ಳಿ.

೧೧. ಮನುಷ್ಯ ಮಾಡಿದ ಅತ್ಯಂತ ಕೆಟ್ಟ ಅವಿಷ್ಕಾರ ಅಂದರೆ "ದುಡ್ಡು....."

ಅದು ಸಂಬಂಧ, ಪ್ರೀತಿ, ಸ್ನೇಹ, ವಿಶ್ವಾಸ ಇವನೆಲ್ಲವನ್ನು ಹಾಳು ಮಾಡುತ್ತದೆ.


೧೨.  ಜೀವನದಲ್ಲಿ ಹೇಗಾದರೂ ಸರಿಯೇ,

ಬರೀ ಗೆಲ್ಲಬೇಕು ಎಂಬ ಭ್ರಮೆ ಬೇಡ.

ನಮ್ಮನ್ನು ಅನುಸರಿಸುವವರು ನಮ್ಮ

ಸಾಧನೆಯನ್ನು ಅನುಸರಿಸುವುದಿಲ್ಲ

ಬದಲಾಗಿ ನಾವು ತುಳಿದ ಹಾದಿಯನ್ನು ಅನುಸರಿಸುತ್ತಾರೆ. 


೧೩.  ಸದಾ ಶ್ರೇಷ್ಠ ಚಿಂತನೆಗಳಿಂದ ಮನಸ್ಸನ್ನು ತುಂಬಿ.

ಸೋಲನ್ನು ಲಕ್ಷಿಸಬೇಡಿ.

ಹೋರಾಟ ಮತ್ತು ತಪ್ಪುಗಳ ಲೆಕ್ಕ ಇಡಬೇಡಿ.

ಸಾವಿರ ಸಲ ಸೋತರೂ ಮತ್ತೊಮ್ಮೆ ಪ್ರಯತ್ನಿಸಿರಿ.

೧೪. "ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ".

ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ.

ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ.

ಹಾಗೆಯೇ ಜೀವನ, ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ. 

೧೫. ಖುಷಿ, ಸಂತೋಷ ಎನ್ನುವುದು ಪ್ರತಿಯೊಬ್ಬ

ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ

ಅದು ಎಂದಿಗೂ ಬರಿದಾಗುವುದಿಲ್ಲ.

ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ

ಹಂಚುವ ಮೂಲಕ ಇನ್ನೊಬ್ಬರ ಮೊಗದಲ್ಲೂ

ಆ ಸಂತಸವನ್ನು ಕಾಣಬಹುದು. 


೧೬. ಜನ ನಡವಳಿಕೆಗಳನ್ನು ಓದಿ ಕಲಿಯುವದಕ್ಕಿಂತ

ನೋಡಿ ಕಲಿಯುವುದೇ ಜಾಸ್ತಿ.

ಆದ್ದರಿಂದ ನಡೆ ಮತ್ತು ನುಡಿ ಸಂಸ್ಕಾರಕ್ಕೆ ಮಾದರಿಯಾಗಿರಲಿ. 


೧೭. ನೊಣಗಳು ನಮ್ಮ ದೇಹವನ್ನು ಬಿಟ್ಟು

ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ,

ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು

ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ,

ಚಿಂತಿಸದಿರಿ ಹುಡುಕುವವರು ಹುಡುಕಿಕೊಂಡು ಇರಲಿ

ನಮಗೆ ನಮ್ಮತನದ ಅರಿವಿರಲಿ,

ನಮ್ಮ ಅಂತರಾಳ ಯಾವಾಗಲೂ ಒಳ್ಳೆಯದು ಬಯಸಲಿ.

 

೧೮. ತಪ್ಪುಗಳನ್ನು ಮಾಡಬಾರದೆಂದು ಗೊತ್ತಿದ್ದರೂ

ತಪ್ಪುಗಳನ್ನು ಮಾಡುತ್ತಿರುತ್ತೇವೆ ಆದರೆ

ಒಳ್ಳೆಯ ಕೆಲಸ ಮಾಡುವಾಗ ಅದು ಸರಿ ಎಂದು ಗೊತ್ತಿದ್ದರೂ

ಹಲವು ಬಾರಿ ಆಲೋಚಿಸುತ್ತೇವೆ. 

೧೯. ಬೆಲೆ ಕಟ್ಟಲು ಸಾಧ್ಯವಿಲ್ಲದ್ದನ್ನು ಮಾರಲು ಸಾಧ್ಯವಿಲ್ಲ.....

ಬೆಲೆ ಕಟ್ಟಲಾಗದ್ದು "ಮತ, ಮಾತೃ, ಗೆಳೆತನ ಮತ್ತು ಧರ್ಮ". 

೨೦. "ಹುಟ್ಟಿದಾಗ ಜಾತಕ",

"ಮಧ್ಯದಲ್ಲಿ ನಾಟಕ",

"ಸತ್ತಾಗ ಸೂತಕ"... ಆದರೂ ನಿಲ್ಲಲ್ಲ ಜನರ ಮಾತಿನ ಕೌತುಕ,

ಬರೀ ಕಣ್ಣಿಂದ ನೋಡಿದ್ರೆ ಎಲ್ಲರಲ್ಲೂ ದ್ವೇಷ ಕಾಣುತ್ತೆ,

ಒಂದು ಸಲ ಹೃದಯದಿಂದ ನೋಡಬೇಕು ಜಗತ್ತೇ ಸುಂದರವಾಗಿ ಕಾಣುತ್ತೆ.


 ೨೧. ಬಯಕೆಗಳು ಕಡಿಮೆ ಇದ್ದಾಗ

ಕಲ್ಲು ಬಂಡೆಯ ಮೇಲೆ ಮಲಗಿದರೂ

ಹಿತವಾದ ನಿದ್ರೆ ಬರುತ್ತದೆ, ಬಯಕೆಗಳು

ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ.

೨೨. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನು ನೋಡಲಾರೆವು,

ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ

ತೆಗೆದುಕೊಳ್ಳೋಣ ಏಕೆಂದರೆ ಜೀವನ ಬಲು ಚಿಕ್ಕದು.


೨೩. ಪ್ರಪಂಚದಲ್ಲಿ ನಾವು ನಂಬಿರುವ ದೇವರುಗಳು ಕಲ್ಲಾಗಿರಬಹುದು,

ಆದರೆ ಅವುಗಳನ್ನು ಪೂಜಿಸುವ ನಮ್ಮ ಮನಸ್ಸುಗಳು ಕಲ್ಲಲ್ಲ,

ಬದುಕು ನಂಬಿಕೆಯ ಕೈಗನ್ನಡಿ.


೨೪. ದಂಡಿಸೋ ಅವಕಾಶ ಇದ್ದರೂ ದಂಡಿಸದೇ

ಇರುವುದನ್ನು ಸಹನೆ ಎನ್ನುತ್ತಾರೆ,

ತಪ್ಪು ಮಾಡೋದಕ್ಕೆ ಬೇಕಾದಷ್ಟು ಮಾರ್ಗಗಳಿದ್ದರೂ

ತಪ್ಪು ಮಾಡದೇ ಇರುವುದಕ್ಕೆ ವ್ಯಕ್ತಿತ್ವ ಎನ್ನುತ್ತಾರೆ.


೨೫. ಯಾರ ಮೇಲು ಅಥವಾ ಯಾರನ್ನೋ

ನೆನಸಿ ಕಣ್ಣೀರು ಯಾವತ್ತೂ ಸುಮ್ಮನೆ ಬರಲ್ಲ,

ಅದು ಕೇವಲ ನಮ್ಮ ಆತ್ಮೀಯರಿಗೆ ಅಥವಾ

ನಮ್ಮ ಜೊತೆ ಒಂದು ಅವಿನಭಾವ ಸಂಬಂಧ

ಇರೋರಿಗೆ ಮಾತ್ರ ಸಾಧ್ಯ. ಅಂತಹ ಸಂಬಂಧವನ್ನು

ಯಾವತ್ತು ಕಳೆದುಕೊಳ್ಳಬಾರದು

ಅದು ವ್ಯಕ್ತಿ ಅಥವಾ ವಸ್ತುವೇ ಆಗಿರಲಿ. 


ಫೆಬ್ರ 9, 2022

ನುಡಿಮುತ್ತುಗಳು ನೀತಿ ಮಾತುಗಳು




1. ಅಂಥವಿಂಥ ಹುಚ್ಚುಗಳಿಗಿಂತ
ಬಹಿರಾಂತರ್ಯದಿಂದ ಒಳ್ಳೆಯವರಾಗಿರುತ್ತೇವೆನ್ನುವ
ಹುಚ್ಚು ಬೆಳೆಸಿಕೊಂಡರೆ ಜೀವನ ಪೆಚ್ಚಾಗದು.

2.ಜಗತ್ತು ನಮ್ಮನ್ನು ನೋಡಲಿ 
ಎಂಬ ಆಸೆಯಿಂದ ಪರ್ವತ ಏರುವ ಬದಲು
ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಹತ್ತಬೇಕು.

3. ಕಾಲದೊಂದಿಗೆ ನಾವೂ ತೆರಳುವುದು ಸಾಮಾನ್ಯ.
ಆದರೆ ಕಾಲವಾಗದ ಕೃತಿಯೊಂದಿಗೆ 
ಹೆಸರು ಬಿಟ್ಟು ತೆರಳುವುದು ಅಸಾಮಾನ್ಯ.

4. ಸಲ್ಲದ್ದು ಒಗೆ,
ಬೇಕಾದ್ದು ಬಗೆ,
ಎಲ್ಲವೆಲ್ಲವಾಗಲಿ ಲಗುಬಗೆ,
ಇಲ್ಲದಿದ್ದರೆ ಮಣ್ಣು-ಹೊಗೆ.

5. ಅಹಂಕಾರ ಮತ್ತು ಅಧಿಕಾರ
ಒಟ್ಟಾದರೆ ಅಭಿವೃದ್ಧಿ ಅಸಾಧ್ಯ, 
ಅಧಿಕಾರದ ಜೊತೆಗೆ ಜವಾಬ್ದಾರಿ
     ಮತ್ತು 
ದೇಶಾಭಿಮಾನ ಬೆಸೆದರೆ
ಅಭಿವೃದ್ಧಿ ಎಂಬುದು ತಾನಾಗಿ ಆಗುತ್ತದೆ.

6. ಸಂದರ್ಭಗಳು ಸಂಭವಿಸಿದಾಗ 
ಗೈವ ಯತುನಗಳು ಫಲಶ್ರುತಿ ನೀಡಾವು. 
ಆತುರದ ಅಮಲಲಿ ಅಡಿಯಿಡುವ ಹೆಜ್ಜೆಗಳು ಇನ್ನಿಲ್ಲದೆ ಸೋತಾವು.

7. ಅನ್ನ ಇದ್ದರೆ ಉಪವಾಸವಿಲ್ಲ,
ಶಿಕ್ಷಣ ಇದ್ದರೆ ವನವಾಸವಿಲ್ಲ, 
ಜ್ಞಾನದಿಂದ ಅಧಿಕಾರ ಸಿಗಬಹುದು, 
            ಆದರೆ 
ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೆಬೇಕು.

8. ಮನುಷ್ಯನು ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ,
ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ,
ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ,
ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾನೆ.
ಇವೆಲ್ಲವನ್ನೂ ಮೀರಿ ನಡೆದವರು ಮಾತ್ರ ವಿಶೇಷವಾಗುತ್ತಾರೆ ಮತ್ತು ಶ್ರೇಷ್ಠವೆನಿಸುತ್ತಾರೆ.

9. ಜಗದ ಕಾವಲಿಗೆ ನಮ್ಮ ನೇಮಕವಾಗಿದೆ, 
ಅದನ್ನು ರಕ್ಷಿಸಿ ತೆರಳುವುದಷ್ಟೇ ಕೆಲಸ, 
ಅದು ನೀಡುವ ಸವಲತ್ತುಗಳೇ ಹೇರಳ, 
ಕಿತ್ತುಕೊಂಡರೆ ನಮ್ಮ ಅಸ್ತಿತ್ವಕ್ಕೆ ನಷ್ಟ.

10. ಕೆಟ್ಟ ಕಾರ್ಯಮಾಡುವವನು ಕಣ್ಣಿದ್ದರೂ ಕುರುಡ, 
ಒಳ್ಳೆಯ ಮಾತು ಕೇಳದವನು ಕಿವಿ ಇದ್ದರೂ ಕಿವುಡ,
ಪ್ರೀತಿಯಿಂದ ಮಾತನಾಡಲು ಬರದವನೂ ಬಾಯಿಯಿದ್ದರೂ ಮೂಕ.

10. ಬರೀ ಜ್ಞಾನ ಇದ್ದರೆ ಸಾಲದು, 
ಬುದ್ದಿವಂತಿಕೆಯಿಂದ ಅನುಷ್ಠಾನಕ್ಕೆ ತಂದರೆ
ಮಾತ್ರ ಜ್ಞಾನದ ವೃದ್ಧಿಯಾಗುತ್ತದೆ.

11. ನಿಮ್ಮ ಜೀವನವನ್ನು ಎಂದಿಗೂ
ಇತರರೊಂದಿಗೆ ಹೋಲಿಸಬೇಡಿ.
'ಸೂರ್ಯ' ಮತ್ತು 'ಚಂದ್ರ'ರ
ನಡುವೆ ಯಾವುದೇ ಹೋಲಿಕೆ ಇಲ್ಲ. 
ಅವರ ಸಮಯ ಬಂದಾಗ ಅವರು ಹೊಳೆಯುತ್ತಾರೆ.

12. ವಂಶವಾಹಿಯಾಗಿ ಅಧಿಕಾರ ಸಿಕ್ಕಿದವನಿಗೆ 
ಅಧಿಕಾರದ ದರ್ಪವಿರುತ್ತದೆ. 
ನಾಯಕನಾಗಿ ಅಧಿಕಾರ ಪಡೆದರೆ ಸಿಕ್ಕ ಅಧಿಕಾರಕ್ಕೆ ಗೌರವ ಸಿಗುತ್ತದೆ.

13. ನಿನ್ನ ಮುಂದೆ ಇರುವ ಒಂದು 
ಮೆಟ್ಟಿಲನ್ನ ಮಾತ್ರ ಗಮನಿಸು, 
ಎಲ್ಲಾ ಮೆಟ್ಟಿಲುಗಳನ್ನಲ್ಲ. 
ನಿನ್ನ ಬದುಕಿಗೆ ನೀನೇ ಬ್ರಹ್ಮ, 
ನೀ ಆಡಿಸಿದ ಹಾಗೆ ಆಡುತ್ತೆ ನಿನ್ನ ಬದುಕು.

14. ಮುಂದುವರೆದಂತೆಲ್ಲ ಒಮ್ಮೊಮ್ಮೆ 
ಹಿಂದೆಯೂ ಅವಲೋಕಿಸಬೇಕು 
ಇಲ್ಲದಿದ್ದರೆ ಅಹಂ ನೆತ್ತಿಗೇರಿ, 
ವ್ಯಕ್ತಿತ್ವ ಹನನದ ಬೀಸುಗತ್ತಿಯಾದೀತು.

15. ಇನ್ನೇನು ಮತ್ತೇನು ಗತಿಯೆಂದು ಬೆದರದಿರು. 
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ, 
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು ತಣ್ಣಗಿರಿಸಾತ್ಮವನು.

16. ಮಾತಿಗೆ ಮಾತು ಬೆಳೆಸುತ್ತಲೇ 
ಅದರ ಮಹತ್ವ ಮಸುಕಾಗಿಸಬಾರದು.
ಅದು ಪ್ರಸಾದದಂತಿದ್ದಾಗ ಆಡುವ-ಆಲಿಸುವರಿಬ್ಬರೂ 
ಕಣ್ಣಿಗೊತ್ತಿಕೊಂಡು ಸ್ವೀ ಕರಿಸಬಹುದು.

17.ನಿನ್ನೆಯ ಅನುಭವವನ್ನು 
ಇಂದಿನ ಪ್ರಯೋಗಕ್ಕೊಳಪಡಿಸಿದಾಗ 
ನಾಳಿನ ನಿರೀಕ್ಷೆಯನ್ನು 
ಅದ್ಭುತವಾಗಿಸಿಕೊಳ್ಳಬಹುದು.

18. ಜೀವನದಲ್ಲಿ ಯಶಸ್ವಿ ಸಾಧನೆಯ 
ಪಯಣಕ್ಕೆ ಏಕಾಂಗಿಯಾಗಿಯೇ ಮುನ್ನಗ್ಗಬೇಕು. 
ಆದರೆ ಶ್ರೇಷ್ಟ ಸಂಕಲ್ಪ ಹೊಂದಿರುವವನಿಗೆ 
ಜೀವನವೇ ನೂರಾರು ಒಳ್ಳೆಯ ವ್ಯಕ್ತಿಗಳನ್ನು 
ಜೊತೆ ಮಾಡಿಕೊಡುತ್ತದೆ.

19. ಹೂವಿನಿಂದ ಹೊತ್ತು ತಂದ ಮಕರಂದದಿಂದ ಮಾಡಿದ ಜೇನು
ಜೇನುಹುಳಗಳಿಗೇ ದಕ್ಕುವುದಿಲ್ಲ ಎಂದಾದರೆ,
ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವದೆ?
ಕಿತ್ತು ತಂದದ್ದು ಹೊತ್ತುಮುಳುಗುವವರೆಗೆ.

20. ನೀರಿನಲ್ಲಿ‌ ಮುಳುಗುವುದರಿಂದ‌ ಪ್ರಾಣ ಹೋಗುವುದಿಲ್ಲ.
ಆದರೆ‌ ನೀರಿಗೆ ಬಿದ್ದಾಗ ಈಜಲು‌ ಬಾರದಿದ್ದರೆ ಪ್ರಾಣ ಹೋಗುತ್ತದೆ.
ಪರಿಸ್ಥಿತಿ ಎಂದೂ ಸಮಸ್ಯೆಯಾಗದು.
ಆದರೆ ಪರಿಸ್ಥಿತಿಯನ್ನು ಎದುರಿಸಲಾಗದಿದ್ದರೆ ಅದೇ ಸಮಸ್ಯೆಯಾಗುತ್ತದೆ.

21. ಎಲೆ ಮೇಲೆ ಕುಳಿತ ನೀರಿನ ಹನಿಗೆ ಗೊತ್ತಿರಲಿಲ್ಲ 
'ಸೂರ್ಯ ಬರುವ ತನಕ ಮಾತ್ರ ನನ್ನ ಸೊಗಸು' 
ಅಂತ. ಹನಿಯನ್ನು ಹೊತ್ತ ಎಲೆಗೂ ಗೊತ್ತಿರಲಿಲ್ಲ 
'ನೀರು ಮುಗಿಯುವ ತನಕ ಮಾತ್ರ ನನ್ನ ಬದುಕು ಅಂತ' 
ಜೀವನದಲ್ಲಿ ಯಾವುದೂ ಶಾಶ್ವತವಲ್ಲ.

22. ಪ್ರೀತಿಸುವುದು ನಿಸರ್ಗ ನಿಯಮ
ಪ್ರೀತಿಯೆಂಬ ಭಾವನೆಗಾಗಿ ಪ್ರೀತಿಸುತ್ತೇವೆ, 
ಅದೊಂದು ರೀತಿಯ ವಿಚಿತ್ರ ಪ್ರತಿಕ್ರಿಯೆ ಕೆಲವರು ಸ್ವಾರ್ಥಕ್ಕಾಗಿ ಪ್ರೀತಿಸುತ್ತಾರೆ,
ಮತ್ತೆ ಕೆಲವರು ನಿಸ್ವಾರ್ಥಿಗಳಾಗಿ ಪ್ರೀತಿಸುತ್ತಾರೆ.

23. ಅಮವಾಸ್ಯೆ ರಾತ್ರಿಯಂದು ನೂರು ನಕ್ಷತ್ರಗಳಿದ್ದರೇನು ಪ್ರಯೋಜನ?
ದಾರಿ ಬೆಳಕಿಗೆ ಮನೆ ದೀಪವೇ ಬೇಕು. 
ಎಷ್ಟೇ ಜನ ಉಳ್ಳವರು/ಬಲಿಷ್ಠರು ಜೊತೆಯಿದ್ದರೂ 
ಅವರೆಲ್ಲ ದೈವದಂತೆ ದೂರವಿರುವರು. 
ಕಷ್ಟದಲ್ಲಿ ಬರುವುದು ಮತ್ತೊಬ್ಬ ಕಷ್ಟಜೀವಿ/ಬಡವ.

24. ಶತ್ರುಗಳನ್ನು ನಿಶ್ಯಕ್ತರು ದ್ವೇಷಿಸುತ್ತಾರೆ, 
ಬಲಶಾಲಿಗಳು ಕ್ಷಮಿಸುತ್ತಾರೆ, ಬುದ್ದಿವಂತರು ನಿರ್ಲಕ್ಷಿಸುತ್ತಾರೆ. 
ಬಲಶಾಲಿಗಳಾಗಿ ಇಲ್ಲವೇ ಬುದ್ದಿವಂತರಾಗಿ ವರ್ತಿಸಿ.
ಯಾವಾಗಲೂ ಒಳ್ಳೆಯವರಾಗಿ ಬಾಳಿ. 
ಆದರೆ ಒಳ್ಳೆಯವರೆಂದು ಸಾಬೀತು ಮಾಡಲು ಸಮಯ ವ್ಯರ್ಥ ಮಾಡಬೇಡಿ.

25. ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತ್ತೇವೆ ಆದರೆ,
ಬಾಳಬೇಕಾಗಿರುವುದು ವ್ಯಕ್ತಿತ್ವದ ಜೊತೆ ಎಂಬ ವಾಸ್ತವ ಗೊತ್ತಿರುವುದಿಲ್ಲ. 
ಮನೆಯ ಬಾಗಿಲು ಎಷ್ಟೇ ಸುಂದರವಾಗಿದ್ದರೂ ಬಾಗಿಲಲ್ಲೇ ಯಾರು ವಾಸಿಸುವುದಿಲ್ಲ.




ನುಡಿಮುತ್ತು

1. ಜೀವನದಲ್ಲಿ ನಾವೆಷ್ಟು ಖುಷಿಯಾಗಿದ್ದೇವೆ 
ಎಂಬುದರ ಮೇಲೆ ಜೀವನದ ಸಾರ್ಥಕತೆ 
ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ 
ಸಂತೋಷವಾಗಿದ್ದಾರೆ ಎಂಬುದು ಮುಖ್ಯ.

2. ಪರಿಚಿತರು ಅಪರಿಚಿತರಾಗಿ ಬಿಡುವುದು,
ಅಪರಿಚಿತರು ಪರಿಚಿತರಾಗಿ ಉಳಿದು ಬಿಡುವುದ
ಇವೆರಡೂ ಸಾಧನೆಯನ್ನಷ್ಟೇ ಅವಲಂಬಿಸಿವೆ.

3. ಏರಿಕೆ ಮತ್ತು ಇಳಿಕೆ ಎಲ್ಲದರಲ್ಲಿಯೂ 
ಸಮಾನವಾಗಿದ್ದರೆ ಮಾತ್ರ ಜೀವನಕ್ಕೆ,
ಜೀವಕ್ಕೆ ಅರ್ಥ. ಬರಿ ಏರಿಕೆಯೇ ಆಗುತ್ತಿದ್ದರೆ 
ಒಂದು ಇಳಿಕೆಯೂ ಸಹಿಸಲಸಾದ್ಯ.

4.ವಿಶ್ವಾಸ ಒಂದು ನಮ್ಮ ಜೊತೆಗಿದ್ದರೆ
ಯಾವುದಕ್ಕೂ ಹೆದರಬೇಕಾಗಿಲ್ಲ. 
ಆತ್ಮವಿಶ್ವಾಸದಿಂದ ನಿಲ್ಲಲು ಭಯಕ್ಕೂ ಭಯ.

5.ಹೊತ್ತೊಯ್ಯುವ ಮುನ್ನ ಹತ್ತು ಮಂದಿಯ
ಬಾಯಿಗೆ ಸವಿ ಮಾತಾಗುವಂತೆ,
ಬದುಕೆನ್ನುವ ಶಿಖರ ಹತ್ತಬೇಕು.
ಅಷ್ಟೇ ಮಾನ್ಯ, ಶೇಷವೆಲ್ಲವೂ ಶೂನ್ಯ

6. ನೋವು ಹಾಗೂ ಮನದ ಭಾವ ಅಸ್ಥಿರ.
ನಮ್ಮದೆನ್ನುವ ನೋವು ನಾಲ್ಕು ದಿನಕ್ಕೆ,
ಪರರದ್ದಾಗಿದ್ದರೆ ಒಂದೇ ದಿನಕ್ಕೆ 
ವಿಸ್ಮೃತಿಯಾಗಿಸುವುದು ಅದರ ಗುಣ.

7.ಕನಸು ಜೀವನಕ್ಕೆ ಸ್ಪೂರ್ತಿ, 
ನಂಬಿಕೆ ಕೆಲಸಕ್ಕೆ ಸ್ಪೂರ್ತಿ, 
ಪ್ರೀತಿ ಹೃದಯಕ್ಕೆ ಸ್ಪೂರ್ತಿ,
ನಗು ಎಲ್ಲದಕ್ಕೂ ಸ್ಪೂರ್ತಿ.

8. ಸಂಪತ್ತು ಎಷ್ಟೇ ಇದ್ದರೂ
ಸರಳತೆ ಮಾತ್ರ ಮನುಷ್ಯನಿಗೆ
ಒಳ್ಳೆಯ ಗೌರವ ತಂದು ಕೊಡುತ್ತೆ,
ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು,
ಸರಳತೆಗೆ ಬೆಲೆ ಕಟ್ಟಲಾಗದು.

9. ಅವರಿವರಂತೆ ಬದುಕಲು ಹೋಗಿ ನಮ್ಮಂತೆ 
ಕಡೆವರೆಗೂ ಬದುಕುವುದೇ ಇಲ್ಲ. 
ಅವರಿವರ ಆಂತರ್ಯ ನಮಗೆ ಅಗೋಚರ, 
ಆದರೂ ಅವರು ನಮಗೆ ಆದರ್ಶವೆನ್ನಿಸುವುದು 
ನಮ್ಮ ಬೌದ್ಧಿಕತೆಯ ದೀವಾಳಿತನ.

10. ಜೀವನದಲ್ಲಿ ಯಾವ ಬದಲಾವಣೆಗಳು ಆಗುತ್ತಿಲ್ಲವೆಂದರೆ
ಅದಕ್ಕೆ ಎಚ್ಚರಿಕೆಯ ನಡೆಯೆನ್ನಬಹುದು 
ಅಥವಾ 
ಏಕತಾನತೆಯ ಜೀವನಕ್ಕೆ ಒಗ್ಗಿರಬಹುದು. 
ಇವೆರಡೂ ವಿಮುಖ ನಡೆಗಳು.

11. ಯಾವ ಆದರ್ಶವನ್ನೂ ಹುಟ್ಟು ಹಾಕುವ 
ಅಥವಾ ಯಾರನ್ನೂ ಮೆಚ್ಚಿಸುವ ಗೋಜಿಗೆ 
ಹೋಗಬೇಕಾಗಿಲ್ಲ. ನಾವು ಸರಿಯಾಗಿದ್ದೇವೆಯೇ 
ಎನ್ನುವ ಆತ್ಮವಿಮರ್ಶೆ ಆಗಾಗ ಆಗುತ್ತಿದ್ದರೆ 
ಅದುವೇ ಆದರ್ಶ, ಮೆಚ್ಚುಗೆಗೆ ರಹದಾರಿ.

12. ಮನುಷ್ಯನು ಕಲಿಯಲು ಬಯಸುವುದಾದರೆ 
ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ. 
ನಮ್ಮೊಳಗಿನ ವಿದ್ಯಾರ್ಥಿ ಕಲಿಯಲು ಒಪ್ಪಿದರೆ 
ಎಲ್ಲವೂ ಪಾಠಗಳೇ, ಎಲ್ಲರೂ ಗುರುಗಳೇ.

13.ಕೆಲವೇ ಜನರು ದೊಡ್ಡ ಮನುಷ್ಯರಾಗಿದ್ದಾರೆ ಎಂದರೆ 
ಅದಕ್ಕೆ ಬಹು ಸಂಖ್ಯೆಯ ದಡ್ಡರ ಪಾತ್ರ 
ಅವರಿಗೇ ಅರಿವಿಲ್ಲದಂತೆ ಇದ್ದೆ ಇರುತ್ತದೆ.

14. ಶಿಸ್ತು ಗೆಲುವಿನ ಅವಿಭಾಜ್ಯ ಅಂಗ, 
ಅಶಿಸ್ತು ಒಮ್ಮೆ ಗೆಲ್ಲಿಸಬಹುದು, 
ಮತ್ತೆ ಮತ್ತೆ ಗೆಲ್ಲಬೇಕೆಂದರೆ 
ಶಿಸ್ತು ಬೇಕೇ ಬೇಕು.

15 ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವುತ್ತವೆ, 
ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ,
ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ 
ಹಾಗೆಯೇ ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ, 
ಕೆಳಗೆ ಬೀಳುವಾಗ ಕುಗ್ಗದೆ, ಮೇಲೇರುವಾಗ ಹಿಗ್ಗದೆ ಸಮಚಿತ್ತದಿ ಬಾಳಿ ಬದುಕುವುದೇ ಜೀವನ.

16. ನಮ್ಮ ಗೌರವ ಬೇರೆಲ್ಲೂ ಇಲ್ಲ, 
ನಾವು ಮಾಡುವ ಒಳ್ಳೆಯ ಕೆಲಸದಲ್ಲಿ ಇರುತ್ತದೆ. 
ಭಾವನೆ ಒಳ್ಳೆಯದಿದ್ದರೆ ಬಾಗ್ಯ ಬೆನ್ನೇರಿ ಬರುತ್ತದೆ.

17. ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ 
ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ. 
ಯಶಸ್ಸು ಮತ್ತು ಕೀರ್ತಿಗಳು ಹಾಗೆ 
ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ 
ನಮ್ಮನ್ನು ಹಿಂಬಾಲಿಸಿ ಬರುತ್ತದೆ.

18. ನಾವು ದೊಡ್ಡವರಾದಾಗ ನಮಗೆ 
ಪೆನ್ಸಿಲ್ ಬದಲಿಗೆ ಪೆನ್ ನೀಡಲಾಗುತ್ತದೆ. 
ಏಕೆಂದರೆ 
ನಮ್ಮ ತಪ್ಪುಗಳನ್ನು ಅಳಿಸುವುದು ಇನ್ನು ಮುಂದೆ ಸುಲಭವಲ್ಲ 
ಎಂಬುದನ್ನು ನಮಗೆ ಅರ್ಥ ಮಾಡಿಸಲು.

19. ಹಡಗು ಎಷ್ಟೇ ಭಾರವಿದ್ದರು 
ಕಡಲ ಮೇಲೆ ತೇಲಲೇಬೇಕು. 
ಹಾಗೆ ಮನಸ್ಸು ಎಷ್ಟೇ ಭಾರವಾದರೂ 
ಬದುಕಿನ ಜೊತೆ ಸಾಗಲೇಬೇಕು.

20. ಪ್ರಕೃತಿ ಮಾನವರಿಗೆ ತಿಳಿಸಿದ
ಅತೀ ಸುಂದರವಾದ ಸಂದೇಶ 
ನೀವು ಮಾಲೀಕರಲ್ಲ. 
ನೀವು ಈ ಜಗತ್ತಿಗೆ ಬಂದ ಅತಿಥಿಗಳು ಮಾತ್ರ.

21. ಯಾರದ್ದೇ ಖಾಸಗಿ ಬದುಕಿನ ಅರಿವು ನಮಗಿರುವುದಿಲ್ಲ, 
ಆದ್ದರಿಂದ ಅವರ ಪೂರ್ಣ ವ್ಯಕ್ತಿತ್ವದ ಕುರಿತಂತೆ ಮಾತನಾಡುವಾಗ
ಇಲ್ಲದ್ದೆ ಹೆಚ್ಚು ಸದ್ಗುಣಗಳು ಇಣುಕುತ್ತವೆ.

22. ಆಹಾರದಲ್ಲಿ ಭಕ್ತಿ ಬೆರೆಸಿದರೆ, 
ಪ್ರಸಾದವಾಗುತ್ತದೆ. 
ನೀರಿನಲ್ಲಿ ಭಕ್ತಿ ಬೆರೆಸಿದರೆ, 
ತೀರ್ಥವಾಗುತ್ತದೆ. 
ಮಾಡುವ ಕೆಲಸದಲ್ಲಿ ಶ್ರದ್ಧೆ ಬೆರೆಸಿದರೆ, 
ಯಶಸ್ಸು ನಮ್ಮದಾಗುತ್ತದೆ.

23. ಆಸೆಗಳಿಗಾಗಿ ಬದುಕಬೇಡ, 
ಆದರ್ಶಕ್ಕಾಗಿ ಬದುಕು. 
ದೀರ್ಘವಾದ ಜೀವನ ಮುಖ್ಯವಲ್ಲ, 
ದಿವ್ಯವಾದ ಜೀವನವೇ ಮುಖ್ಯ.

24. ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು ವಿದ್ಯೆ. 
ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ.

25. ಅಡೆ-ತಡೆಗಳ ಪಡೆ ಎಡೆಯಿಲ್ಲದೆ
ಎಡತಾಕುತ್ತಿದ್ದರೆ ಮಾತ್ರ 
ಚಲನ-ಶೀಲತೆಯಲ್ಲಿದ್ದು ಕಡೆಗೊಂದು ಕಡೆ ತಲುಪುತ್ತೇವೆ.


ನವೆಂ 6, 2017

ಥಾಮಸ್ ಆಲ್ವಾ ಎಡಿಸನ್

ಒಂದು ದಿನ ಮಗು
ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು
ತನ್ನ ತಾಯಿಯ ಕೈಗೆ
ಒಂದು ಪತ್ರ ಕೊಡುತ್ತಾನೆ, ಅಮ್ಮಾ,
 ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ

ಅದನ್ನು
 ಮಗನಿಗಾಗಿ ಗಟ್ಟಿಯಾಗಿ  ಓದುತ್ತಾ
ಆ ತಾಯಿಯ ಕಣ್ಣು ಒದ್ದೆಯಾಯಿತು :

"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ.
ನಮ್ಮ ಶಾಲೆ
ಅವನ ಬುದ್ಧಿಮತ್ತೆಗೆ
ತುಂಬಾ ಸಣ್ಣದು
ಹಾಗೂ
 ಅವನಿಗೆ ಕಲಿಸಬಲ್ಲ
 ಅರ್ಹತೆ ನಮ್ಮ
ಯಾವ ಉಪಾಧ್ಯಾಯರಿಗೂ ಇಲ್ಲ.
ಆದುದರಿಂದ
 ಅವನ ವಿದ್ಯಾಭ್ಯಾಸವನ್ನು ನೀವೇ
 ಮನೆಯಲ್ಲಿ ಕಲಿಸುವುದು ಒಳಿತು."

ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ,
 ಆಗ ಎಡಿಸನ್
ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ.
ಆ ಸಂದರ್ಭದಲ್ಲಿ
ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ
ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು
ಬಿಡಿಸಿ ನೋಡಿದರೆ
ಅದರಲ್ಲಿ ಹೀಗೆ ಬರೆದಿರುತ್ತದೆ. :

"ನಿನ್ನ ಮಗ
ಒಬ್ಬ ಬುದ್ಧಿಮಾಂದ್ಯ,
ಅವನನ್ನು ನಾವು
ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ,"

ತನ್ನ ಮಗುವಿನ
 ಮೃದು ಮನಸ್ಸನ್ನು ನೋಯಿಸದಿರಲು
 ಅಂದು ವಿರುದ್ಧವಾಗಿ
ಓದಿದ
 ತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ,

 ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ
 ಮತ್ತು
ತಮ್ಮ ದಿನಚರಿಯಲ್ಲಿ
ಹೀಗೆ ಬರೆಯುತ್ತಾರೆ:

" ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ
 ಅವನ ಶ್ರೇಷ್ಠ ಮಾತೆಯ ದೆಸೆಯಿಂದ
 ಅವನು ಶತಮಾನದ ಬುದ್ಧಿವಂತನಾಗುತ್ತಾನೆ."   

"ಸಂಸ್ಕಾರವಂತ ತಾಯಿಯೇ  ದೇವರು"
"ಆಚಾರವಂತ ಮನೆಯೇ ದೇವಾಲಯ":

ನವೆಂ 5, 2017

ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳನ್ನು ರಕ್ಷಿಸಲು ರೂಪುಗೊಂಡ ಸಾಧನ..ಹೀಗೆ ಮಾಡಿದರೆ ಕಾಪಾಡಬಹುದು!

ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳನ್ನು ರಕ್ಷಿಸಲು ರೂಪುಗೊಂಡ ಸಾಧನ..ಹೀಗೆ ಮಾಡಿದರೆ ಕಾಪಾಡಬಹುದು!: ಇಲ್ಲಿ ನಾಲಕ್ಕು ಚಿತ್ರಗಳಿವೆ. ಒಂದೊಂದು ಚಿತ್ರದಲ್ಲೂ ಕಾರ್ಯಾಚರಣೆಯನ್ನು ರೂಪಿಸಲಾಗಿದೆ.

ಮೈಂಡ್ ಆಕ್ಟೀವ್ ಆಗಿ ಇರಬೇಕಾದರೆ... ಈ 4 ಕೆಲಸಗಳನ್ನು ಮಾಡಬೇಕು.!!!

ಮೈಂಡ್ ಆಕ್ಟೀವ್ ಆಗಿ ಇರಬೇಕಾದರೆ... ಈ 4 ಕೆಲಸಗಳನ್ನು ಮಾಡಬೇಕು.!!!: ಮಾನವನ ದೇಹದಲ್ಲಿ ಮಿದುಳು ತುಂಬಾ ಮುಖ್ಯವಾದ ಅಂಗ.

"ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು

ಒಂದು ಜಾಲಿಯ ಮರ.
ಅದರ ಮೈತುಂಬ ಮುಳ್ಳು. ಯಾರೂ ಅದರ ಬಳಿ ಸುಳಿಯುತ್ತಿರಲಿಲ್ಲ.
ಒಂಟಿ ಜೀವನ ಮರಕ್ಕೆ ಬೇಸರವಾಯಿತು.

ಯಾರಾದರೂ ಅತಿಥಿಗಳು ಬರಬಹುದು ಎಂದು ದಾರಿ ಕಾಯುತ್ತಿತ್ತು.
ಒಂದು ದಿನ ರಾತ್ರಿ ಒಂದು ಪಕ್ಷಿಯು ಆ ಮರದ ಮೇಲೆ ಬಂದು ಕುಳಿತಿತು.
ಮರಕ್ಕೆ ಹಿಡಿಸಲಾರದಷ್ಟು ಸಂತಸವಾಯಿತು 'ಅತಿಥಿ ದೇವೋಭವ' ಎಂದು ಈ ಪಕ್ಷಿಯನ್ನು ಗೌರವಾದರಗಳಿಂದ ಉಪಚರಿಸಿ ಆಶ್ರಯವನ್ನಿತ್ತಿತು. ಪಕ್ಷಿಯು ಸಂತಸದಿಂದ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಹೊರಟು ನಿಂತಿತು.
ಮಿತ್ರನೇ, ನೀನು ನನ್ನ ಕೂಡ ಇಲ್ಲಿಯೇ ಇದ್ದು ಬಿಡು ಎಂದು ಮರವು ಪಕ್ಷಿಗೆ ವಿನಂತಿಸಿತು.

ಪಕ್ಷಿ ಹೇಳಿತು - "ದೇವರು ನನಗೆ ಹಾರಲು ಪಕ್ಕಗಳನ್ನು ಕೊಟ್ಟಿದ್ದಾನೆ.
ನಿನಗೆ ಸ್ಥಿರವಾಗಿರಲು ಬೇರನ್ನು ಕೊಟ್ಟಿದ್ದಾನೆ.
ನಾನು ಹಾರುತ್ತಿರಲೇಬೇಕು. ನೀನು ಒಂದು ಕಡೆ ಸ್ಥಿರವಾಗಿರಲೇಬೇಕು.
ಅದುವೇ ಜೀವನದ ರೀತಿ. ಮತ್ತೆ ಎಂದಾದರೂ ಸಮಯ ಸಿಕ್ಕಾಗ ನಾನು ಬರುತ್ತೇನೆ.
ನಿನ್ನ ಉಪಕಾರವನ್ನು ನಾನು ಎಂದೂ ಮರೆಯಲಾರೆ." ಎಂದು ಹೇಳಿ ಪಕ್ಷಿ ಹಾರಿ ಹೋಯಿತು.

ಮರವು ಇನ್ನೂ ಮಿತ್ರನ ದಾರಿ ಕಾಯುತ್ತಲಿದೆ.
ನಾವು ಕೂಡಿದಾಗ ಸುಖಿಸಬೇಕು.
ಅಗಲಿದಾಗ ಕೂಡಿದ ಸುಖವನ್ನು ಸ್ಮರಿಸುತ್ತ ಸಂತಸದಿಂದಿರಬೇಕು.

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಕೊಂಚ ಆಲೋಚಿಸಿ ನೋಡಿ

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"

 💚 ಕೊಂಚ ಆಲೋಚಿಸಿ ನೋಡಿ💚

"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"

💚 ಕೊಂಚ ಆಲೋಚಿಸಿ ನೋಡಿ💚

"*ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ"

ಕರುನಾಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

✍ ಇತಿಹಾಸ
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.೧೯೫೬ ರ ನವೆಂಬರ್ ೧ ರಂದು, ಮದ್ರಾಸ, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರುಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು.ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ್ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಟಯ್ಯ

✍ ಕರ್ನಾಟಕ ಒಂದುಗೂಡಿದರ ಸವಿ ನೆನಪಿಗಾಗಿ ಪ್ರತಿ ವರುಷ ನವೆಂಬರ್-೧ ರಂದು ಆಚರಿಸುವ ಹಬ್ಬವೇ ರಾಜ್ಯೋತ್ಸವ. ೧೯೫೬ ರಲ್ಲಿ ಕನ್ನಡ ಪ್ರದೇಶಗಳು, "ಮೈಸೂರ ರಾಜ್ಯ" ಎನ್ನುವ ಹೆಸರಿನಲ್ಲಿ ಒಂದುಗೂಡಿದವು. ೧೯೭೩ ರಲ್ಲಿ "ಕರ್ನಾಟಕ ರಾಜ್ಯ" ಅಂತಾ ಮರು ಹೆಸರಿಸಲಾಯಿತು.ಹಾಗಾಗಿ ಭಾಷಾ ಆಧಾರದ ಮೇಲೆ ನವೆಂಬರ್ ೧,೧೯೭೩ ರಂದು ಕನ್ನಡ ನಾಡಿನ ಸವಿ ನೆನಪಿಗಾಗಿ ನಾಡ ಹಬ್ಬವಾಗಿ ಆಚರಿಸುತ್ತಾ ಬರುತಿದ್ದಾರೆ.

🌹 ಆಚರಣೆಗಳು

ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗು ತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ.ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.ಕರ್ನಾಟಕದಲ್ಲಿನ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

✍🙏 ಆಚರಣೆಯ ತಿಂಗಳು

ನವೆಂಬರ್ ೧ ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್ ೧ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಬಾವುಟಸರ್ಕಾರದ ಪ್ರಮುಖ ಕಛೇರಿಯ ಮೇಲೆ ಎಲ್ಲೆಲ್ಲಿಯೂ ಹಾರಾಡುತ್ತಿರುತ್ತದೆ.

ಅಂದಿನಿಂದ ಇಂದಿನವರೆಗೂ ಕನ್ನಡಿಗರು ಕನ್ನಡನಾಡಿನ ಸಂಸ್ಕೃತಿ ಸಂಪ್ರದಾಯಗಳ ಉಳಿವಿಗಾಗಿ ಶ್ರಮಿಸುತ್ತಾ ಬರುತಿದ್ದಾರೆ ಹಾಗೆಯೆ ನಾವು ಕನ್ನಡ ನಾಡುನುಡಿಗಾಗಿ ತ್ಯಾಗ,ತಾಳ್ಮೆ ,ಪ್ರೀತಿ ,ಸಹನೆಯ ಮನೋಭಾವಗಳನ್ನೂ ಬೆಳೆಸಿ ಉಳಿಸಿಕೊಂಡೂ ಮುಂದಿನ ಪ್ರಜೆಗಳಿಗೆ ಮಾದರಿಯಾಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬ್ರಿಟೀಷ ಆಡಳಿತದಲ್ಲಿ ೧೯ ಜಿಲ್ಲೆಗಳನ್ನು ಹೊಂದಿದ್ದ ಕರ್ನಾಟಕ,ನಂತರ ಸುಲಭ ಆಡಳಿತಕ್ಕಾಗಿ ಕರ್ನಾಟಕ ಹೊಸ ಜಿಲ್ಲೆಗಳನ್ನು ರಚಿಸಿಕೊಂಡಿತು. ಬೆಂಗಳೂರು ನಗರ ಬೆಳೆದಂತೆ ೧೯೮೩ ರಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆ ಎಂದು ಪ್ರತ್ಯೆಕಿಸಲಾಯಿತು ಕರ್ನಾಟಕದ ಜನತೆಯ ಬೇಡಿಕೆಯಿಂದಾಗಿ ೧೯೯೭ ರಲ್ಲಿ ಜೆ.ಎಚ್ .ಪಟೇಲರು ೭ ಹೊಸ ಜಿಲ್ಲೆಗಳನ್ನೂ ರಚಿಸಿದರು ದಾವಣಗೆರೆ,ಚಾಮರಾಜನಗರ ,ಬಾಗಲಕೋಟೆ ,ಹಾವೇರಿ ಉಡುಪಿ ,ಕೊಪ್ಪಳ ,ಗದಗ ಇವು ಆಗ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ೨೦೦೭ರಲ್ಲಿ ಎಚ್ .ಡಿ.ಕುಮಾರಸ್ವಾಮಿಯವರು ರಾಮನಗರವನ್ನು ಬೆಂಗಳುರ ಗ್ರಾಮಾಂತರ ಜಿಲ್ಲೆಯಿಂದ ,ಚಿಕ್ಕ ಬಳ್ಳಾಪುರವನ್ನು ಕೋಲಾರದಿಂದ ಬೇರ್ಪಡಿಸಿ ಎರಡು ಹೊಸ ಜಿಲ್ಲೆಗಳನ್ನು ರಚಿಸಿದರು ಈಗ ಕರ್ನಾಟಕದಲ್ಲಿ ೩೦ ಜಿಲ್ಲೆಗಳು .ಅಷ್ಟೇ ಅಲ್ಲ ಕನ್ನಡ ನಾಡಿನ ಕಲೆ,ಸಂಸ್ಕೃತಿ ಉಡುಗೆ ತೊಡುಗೆಗೆ ವಿದೇಶಿಗರು ಮಾರು ಹೋಗಿದ್ದಾರೆ ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವುಗಳೇ ದನ್ಯರು ಅಲ್ಲದೇ ಕರ್ನಾಟಕದಲ್ಲಿ ಅಪಾರವಾದ ಬೆಲೆಬಾಳುವ ಖನಿಜ ಸಂಪತ್ತು ಇದ್ದು ರಾಜಕೀಯದ ಪ್ರಭಾವಿ ಜನ ಹಾಳು ಮಾಡದಂತೆ ಕಾಪಾಡಬೇಕಿದೆ ಉಳಿಸಲು ಕರ್ನಾಟಕದ ಜನತೆ ಕೈ ಕಟ್ಟಿ ನಿಲ್ಲಬೇಕಿದೆ .ಹಾಗೆಯೆ ನಾವೆಲ್ಲ ಕನ್ನಡ ಮಾತೆಯ ಮಡಿಲಲ್ಲಿ ಕನ್ನಡಿಗರಾಗಿ ಬಾಳೋಣ.

*ಉಸಿರಾಗಲಿ ಕನ್ನಡ, ಹಸಿರಾಗಲಿ ಕನ್ನಡ.*